ಪ್ರಮೋದ್ ಪಾಂಡುರಂಗ ಸಾವಂತ್ (ಹುಟ್ಟು- ೨೪ ಏಪ್ರಿಲ್ ೧೯೭೩) ಒಬ್ಬ ಭಾರತೀಯ ರಾಜಕಾರಣಿಯಾದ್ದು, ಗೋವಾದ ೧೩ನೇ ಹಾಗೂ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ. ಸಾವಂತ್ ಗೋವಾ ವಿಧಾನಸಭೆಯಲ್ಲಿ ಸಾಂಖಳಿಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ಇವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ಮುಖ್ಯಮಂತ್ರಿ ಆಗುವ ಮುಂಚೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ಪ್ರಮೋದ್ ಸಾವಂತ್ ಅವರು ೨೪ ಏಪ್ರಿಲ್ ೧೯೭೩ರಲ್ಲಿ ಪಾಂಡುರಂಗ ಮತ್ತು ಪದ್ಮಿನಿ ಸಾವಂತ್ ದಂಪತಿಗೆ ಹುಟ್ಟಿದರು. ಗಂಗಾ ಎಜುಕೇಶನ್ ಸೊಸೈಟಿಯ ಕೊಲ್ಲಾಪುರದ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುರ್ವೇದ ವೈದ್ಯ ಪದವಿಯನ್ನು ಪಡೆದರು. ಸಮಾಜ ಸೇವೆಯ ಸ್ನಾತಕ್ಕೋತ್ತರ ಪದವಿಯನ್ನು ಪುಣೆಯಲ್ಲಿರುವ ತಿಲಕ್ ಮಹಾರಾಷ್ಟ್ರ ವಿಶ್ವವಿದ್ಯಾಲದಲ್ಲಿ ಪಡೆದರು. == ರಾಜಕೀಯ ಜೀವನ == ಸಾವಂತ್ ಅವರು ೨೦೧೨ರ ಗೋವಾ ವಿಧಾನಸಭಾ ಚುನಾವಣೆಯನ್ನು ಸಾಂಖಳಿಂ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರತಾಪ್ ಗೌನ್ಸ್ ಅವರನ್ನು ೧೪,೨೫೫ (೬೬.೦೨%) ಮತಗಳಿಂದ ಸೋಲಿಸುವ ಮೂಲಕ ಗೆದ್ದರು. ಕೆಲಕಾಲ ಗೋವಾ ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸಿದರು. ೨೦೧೭ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಧರ್ಮೇಶ್ ಸಗ್ಲಾನಿ ಅವರನ್ನು ೧೦,೦೫೮ (೪೩.೦೪%) ಮತಗಳಿಂದ ಸೋಲಿಸುವ ಮೂಲಕ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ೨೨ ಮಾರ್ಚ್ ೨೦೧೭ರಲ್ಲಿ ಗೋವಾ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. == ಗೋವಾದ ಮುಖ್ಯಮಂತ್ರಿ == ಮನೋಹರ್ ಪರಿಕ್ಕರ್ ಅವರ ನಿಧನದ ಮೆರೆಗೆ ಮುಖ್ಯಮಂತ್ರಿಯಾಗಿ ಇನ್ನೊಬ್ಬರನ್ನು ಆಯ್ಕೆಮಾಡಬೇಕಿತ್ತು. ವಿಧಾನಸಭೆಯು ಸಾವಂತ್ ಅವರನ್ನು ಆಯ್ಕೆ ಮಾಡಿದ ನಂತರ, ಗೋವಾದ ೧೩ನೇ ಮುಖ್ಯಮಂತ್ರಿಯಾಗಿ ೧೯ ಮಾರ್ಚ್ ೨೦೧೯ರಲ್ಲಿ ಪ್ರಮಾಣವಚನ ಸ್ವೀಕರಿಸಿದರು.. == ವೈಯಕ್ತಿಕ ಜೀವನ == ಸಾವಂತ್ ಮರಾಠ ಜಾತಿಯವರಾಗಿದ್ದಾರೆ. ಸಾವಂತ್ ಅವರ ಹೆಂಡತಿ ಸುಲಕ್ಷಣಾ ಅವರು ಬಿಚೋಲಿಂನ ಶ್ರೀ ಶಾಂತಾದುರ್ಗ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಸಾಯನಶಾಸ್ತ್ರದ ಶಿಕ್ಷಕಿ ಆಗಿದ್ದಾರೆ. ಇವರು ಕೂಡ ಬಿಜೆಪಿ ನಾಯಕಿಯಾಗಿದ್ದು, ಗೋವಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ. == ಉಲ್ಲೇಖಗಳು ==